ಅಖಂಡ ಕರ್ನಾಟಕ ಬಿಜೆಪಿಯ ಸ್ಪಷ್ಟ ನಿಲುವು: ಬಿಎಸ್ವೈ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರಕರ್ನಾಟಕ-ದಕ್ಷಿಣ ಕರ್ನಾಟಕ ಎಂದು ಒಡೆದಾಳುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದು ಸ್ಪಷ್ಟವಾಗಬೇಕಾಗಿದೆ. ಉತ್ತರ ಕರ್ನಾಟಕದ ಜನರು ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಮಾತನಾಡ ಬಾರದು. ಬಿಜೆಪಿ ಇಂದಿಗೂ ಪ್ರತ್ಯೇಕ ರಾಜ್ಯಕ್ಕೆ ಬೆಂಬಲಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಯಲಹಂಕದಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಅನೇಕ ಸಾಹಿತಿಗಳು, ಕನ್ನಡದ ಕಟ್ಟಾಳುಗಳ ಹೋರಾಟದ ಫಲವಾಗಿ ಕರ್ನಾಟಕದ ಏಕೀಕರಣವಾಗಿದೆ. ಕರ್ನಾಟಕದ ಅಖಂಡತೆಗೆ ಅಪಾಯವಾಗುತ್ತಿದೆ. ಕುಮಾರಸ್ವಾಮಿ ತಾವು ಅಖಂಡ ಕರ್ನಾಟಕದ ಸಿಎಂ ಆಗದೆ 37 ಜೆಡಿಎಸ್ ಕ್ಷೇತ್ರಗಳ ಸಿಎಂ ಎಂದು ಭಾವಿಸಿರೋದು ದುರ್ದೈವ. ಕರ್ನಾಟಕದ ಜನ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದರು.

ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದರ ಪರಿಣಾಮವನ್ಮು ಮೈತ್ರಿ ಸರ್ಕಾರ ಹೊರಬೇಕಾಗುತ್ತದೆ.
ಉತ್ತರ ಕರ್ನಾಟಕದ ‌ಜನರ ಆಕ್ರೋಶ ಭುಗಿಲೇಳಲು ನಿಮ್ಮ ಒಡೆದಾಳುವ ನೀತಿ, ನಿಮ್ಮ ಕುಟುಂಬ ರಾಜಕಾರಣ ಅಧಿಕಾರ ದಾಹ ಕಾರಣ. ನಿಮ್ಮ ಕೈ ಹಿಡಿದ ಪಕ್ಷಗಳನ್ನು, ಜನತಾ ಪರಿವಾರವನ್ನು ಒಡೆದ್ರಿ, ಈಗ ಕರ್ನಾಟಕವನ್ನು ಒಡೆಯಲು ಹೊರಟಿದ್ದೀರಿ ಆಕ್ರೋಶ ವ್ಯಕ್ತ ಪಡಿಸಿದರು.

ದಯವಿಟ್ಟು ಯಾವ ಕಾರಣಕ್ಕೂ ಉತ್ತರ ಕರ್ನಾಟಕದ ಜನರ ಬಾಯಿಂದ ಪ್ರತ್ಯೇಕತೆಯ ಕೂಗು ಬರಬಾರದು. ವಿಪಕ್ಷವಾಗಿ ಬಿಜೆಪಿ ನಿಮ್ಮ ಜೊತೆಗಿದೆ. ಶಾಂತಿ, ಸುವ್ಯವಸ್ಥೆಗೆ ಯಾವುದೇ ಧಕ್ಕೆ ಆಗದಂತೆ ಸಹಕರಿಸಬೇಕು ಎಂದರು.

ಪ್ರತ್ಯೇಕ ರಾಜ್ಯದ ಬಗ್ಗೆ ಬಿಜೆಪಿ ನಾಯಕರು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಶ್ರೀರಾಮುಲು ಅವರ ಜೊತೆ ನಾನು ಮಾತಾಡಿದ್ದೇನೆ. ಅಖಂಡ ಕರ್ನಾಟಕ ಬಿಜೆಪಿಯ ಸ್ಪಷ್ಟ ನಿಲುವು ಎಂದು ಹೇಳಿದರು.

Related Articles

Comments (0)

Leave a Comment