ನಗರದ ಅಭಿವೃದ್ಧಿಗೆ ಇತರೆ ಕಂಪನಿಗಳು ಸಿಎಸ್‌ಆರ್‌ ಫಂಡ್ ತೆಗೆದಿಡಲಿ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಇನ್‌ಫೋಸೆಸ್‌ ಕಂಪನಿ ಮಾದರಿಯಲ್ಲೇ ಇತರೆ ದೊಡ್ಡ ಕೈಗಾರಿಕೆಗಳು ತಮ್ಮ ಲಾಭದಲ್ಲಿ ಶೇ.2 ರಷ್ಟು ಹಣವನ್ನು ನಗರದ ಅಭಿವೃದ್ಧಿಗೆ ನೀಡುವ ಮೂಲಕ ಸಹಕಾರ ಕೊಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ‌ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೋಣಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ಮಾಣ ಹಾಗೂ ನಿರ್ವಹಣೆ ಮಾಡಲು ಬೆಂಗಳೂರು ಮೆಟ್ರೋ ಜೊತೆ ಇನ್‌ಫೋಸಿಸ್ ಫೌಂಡೇಷನ್ ಒಡಂಬಡಿಕೆಗೆ ಸಹಿ‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಧಾಮೂರ್ತಿ ಅವರು ಸರಕಾರದೊಂದಿಗೆ ಒಪ್ಪಂದಕ್ಕೆ ಮುಂದಾಗಿರುವ ಇವರ ನಡೆ ಇಡೀ ದೇಶಕ್ಕೆ ಮಾದರಿಯಾಗಲಿದೆ. ಬೆಂಗಳೂರು ಇಡೀ ದೇಶದಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ಜನದಟ್ಟಣೆ ಜತೆಗೆ ಟ್ರಾಫಿಕ್ ಸಮಸ್ಯೆಯಿಂದ ನಿತ್ಯ ಜನರು ಪರದಾಡುವಂತಾಗಿದೆ. ಈ ಸಮಸ್ಯೆ ನೀಗಿಸಲು ೨೦೦೬ರಲ್ಲಿ ಕುಮಾರಸ್ವಾಮಿ ಅವರು ಮೆಟ್ರೋಗೆ ಅಡಿಗಲ್ಲು ಹಾಕಿದರು. ಇದರ ಮೊದಲ ಹಂತದಲ್ಲಿ
ನಿತ್ಯ ಐದು ಲಕ್ಷ ಜನರು ಮೆಟ್ರೋದಲ್ಲಿ ಓಡಾಡುತ್ತಿದ್ದಾರೆ. ಎರಡನೇ ಹಂತ ಪೂರ್ಣಗೊಂಡರೆ ಸುಮಾರು ೩೦ ಲಕ್ಷ ಜನ ಓಡಾಡುವ ಅಂದಾಜು ಇದೆ. ಜನರು ನೆಮ್ಮದಿಯಿಂದ ಸಂಚಾರ ಮಾಡಬಹುದು ಮೆಟ್ರೋದ ಉದ್ದೇಶ ಎಂದು ಹೇಳಿದರು.

ನಗರದಲ್ಲಿ ದೊಡ್ಡ ಕೈಗಾರಿಕೆ, ಮಾಹಿತಿ ತಂತ್ರಜ್ಞಾನಗಳಿವೆ. ಇವರ ಲಾಭದಲ್ಲಿ ಸಿಎಸ್‌ಆರ್‌ ಫಂಡ್‌ನಲ್ಲಿ ಶೇ.೨ರಷ್ಟು ಹಣ ತೆಗೆದಿಡುವ ಕಾನೂನು ಇದೆ. ಟ್ರಸ್ಟ್, ದೊಡ್ಡ ಕಂಪನಿಗಳು ಸರಕಾರದೊಂದಿಗೆ ಕೈ ಜೋಡಿಸಿದರೆ ಬೆಂಗಳೂರು ಹೆಚ್ಚು ಸುರಕ್ಷಿತ ಹಾಗೂ ಶಾಂತಿಯುತ ನಗರವಾಗಿ ನಿರ್ಮಾಣವಾಗಲಿದೆ.

ಐದು ವರ್ಷ ಪೂರೈಸಲಿದ್ದೇವೆ:

ಸಮ್ಮಿಶ್ರ ಸರಕಾರದ ಬಗ್ಗೆ ಕೆಲವರು ಏನೇನೋ ಹೇಳುತ್ತಾರೆ.‌ಆದರೆ ನಮ್ಮ ಸಮ್ಮಿಶ್ರ ಸರಕಾರ ಐದು ವರ್ಷ ಪೂರೈಕೆ ಮಾಡೇ ಮಾಡಲಿದೆ ಎಂದು ಹೇಳಿದರು.ಕರ್ನಾಟಕದ ದೃಷ್ಟಿಯಿಂದ ಒಳ್ಳೆ ಆಡಳಿತ ನೀಡಬೇಕು , ರಾಷ್ಟ್ರದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಲು ಮೈತ್ರಿ ಸರಕಾರ ರಚನೆಯಾಗಿದೆ. ಹೀಗಾಗಿ ಐದು ವರ್ಷ ಪೂರೈಸಲಿದ್ದೇವೆ ಎಂದರು. ಕರ್ನಾಟಕವನ್ನು ಅಭಿವೃದ್ಧಿ ಮಾಡುವ ಕಲ್ಪನೆ ಮುಖ್ಯಮಂತ್ರಿ ಅವರಿಗಿದೆ. ಇದಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.

ತನಿಖೆಗೂ ಸಿದ್ಧ:
ಉಡುಪಿಯ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ವಿಷ ಪ್ರಾಸನ ಆಗಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಅಗತ್ಯ ಬಿದ್ದರೆ ಖಂಡಿತ ತನಿಖೆ ಮಾಡಿಸಲಾಗುವುದು.

Related Articles

Comments (0)

Leave a Comment