ಶಾಂತಿವನದಲ್ಲಿ ಕಾಂಗ್ರೆಸ್ ನಾಯಕರ ಸಭೆ!

ಬೆಂಗಳೂರು :  ಸಮ್ಮಿಶ್ರ  ಸರ್ಕಾರದ ಭವಿಷ್ಯದ ಬಗ್ಗೆ  ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದ್ದ ವಿಡಿಯೋ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇಂದು ಉಜಿರೆಯ ಶಾಂತಿ ವನದ ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಪ್ರಮುಖರ ಸಭೆ ನಡೆಸುತ್ತಿದ್ದಾರೆ.

ಸಚಿವರಾದ ರಮೇಶ್ ಜಾರಕಿಹೊಳಿ, ಶಿವಾನಂದ ಪಾಟೀಲ್‌, ಶಾಸಕರಾದ ನಾಗೇಂದ್ರ, ಮಹೇಶ್‌ ಕಮಟಳ್ಳಿ, ಬಸವನಗೌಡ ದದ್ದಲ್‌, ಪ್ರತಾಪ್‌ ಗೌಡ ಪಾಟೀಲ್‌, ಶ್ರೀಮಂತ ಪಾಟೀಲ್‌, ಬಿ.ನಾರಾಯಣ ರಾವ್‌, ಸಂಸದ ಬಿ.ವಿ.ನಾಯಕ್‌, ಮಾಜಿ ಸಚಿವ ಆಂಜನೇಯ, ವಿಧಾನ ಪರಿಷತ್‌ ಸದಸ್ಯ ಧರ್ಮಸೇನಾ, ಐವಾನ್‌ ಡಿ ಸೋಜ ಅವರು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ಸಿದ್ದರಾಮಯ್ಯನವರು ನಮ್ಮ ನಾಯಕರು, ರಾಜಕೀಯದ ಬಗ್ಗೆ ನಮ್ಮ ಭೇಟಿಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ನಮ್ಮ ನಾಯಕರ ಆರೋಗ್ಯ ವಿಚಾರಿಸಲು ಬಂದಿದ್ದೆವು ಎಂದು ತಿಳಿಸಿದ್ದಾರೆ.

ಮೈತ್ರಿ ಸರ್ಕಾರದ ಕುರಿತು ತಾವು ಮಾತನಾಡಿದ ವಿಡಿಯೋ ಬಹಿರಂಗವಾದ ಹಿನ್ನೆಲೆ ಮಾಜಿ ಸಿಎಂ ಸಿದ್ಧರಾಮಯ್ಯ ಸಿಟ್ಟಿನಿಂದ ಕುದಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಜೊತೆ ಮಾತಾಡುವಾಗಲೇ ರಹಸ್ಯವಾಗಿ ತಮ್ಮ ಆಪ್ತರೇ ವಿಡಿಯೋ ಮಾಡಿ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಆ ಇಬ್ಬರ ಮೇಲೆ ಕೆಂಡದಂಥ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Comments (0)

Leave a Comment