ಪಟ್ಟಾಭಿಷೇಕಕ್ಕೂ ಮುನ್ನವೇ ಸಿಎಂ ಕಚೇರಿಯಲ್ಲಿ ವಾಸ್ತು ಕಸರತ್ತು: ಕುರ್ಚಿ ದಿಕ್ಕು ಬದಲಿಸಿ ನೊಣವಿನಕೆರೆ ಅಜ್ಜಯ್ಯನ ಫೋಟೋ ಇಟ್ಟ ಡಿ.ಕೆ. ಶಿವಕುಮಾರ್!

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪಟ್ಟಾಭಿಷೇಕ ಮಾಡಿಕೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ, ಅವರ ಅಧಿಕೃತ ಕಚೇರಿಯಲ್ಲಿ ಭಾರಿ ಬದಲಾವಣೆಗಳು ನಡೆದಿವೆ. ದೈವಭಕ್ತ ಹಾಗೂ ವಾಸ್ತು ಶಾಸ್ತ್ರದ ಮೇಲೆ ಅಪಾರ ನಂಬಿಕೆ ಹೊಂದಿರುವ ಡಿ.ಕೆ. ಶಿವಕುಮಾರ್ ಅವರ ಆದೇಶದಂತೆ, ಮುಖ್ಯಮಂತ್ರಿಗಳ ಕಚೇರಿಯ ಮುಖ್ಯ ಆಸನ (ಕುರ್ಚಿ) ಇರುವ ದಿಕ್ಕನ್ನು ವಾಸ್ತು ನಿಯಮಗಳ ಪ್ರಕಾರ ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ.

ಈ ಹಿಂದೆ ಇದ್ದ ಆಸನದ ದಿಕ್ಕನ್ನು ಬದಲಾಯಿಸಿ, ಧನಾತ್ಮಕ ಶಕ್ತಿ ಹಾಗೂ ಸುಗಮ ಆಡಳಿತಕ್ಕೆ ಪೂರಕವಾಗುವಂತಹ ಹೊಸ ದಿಕ್ಕಿನಲ್ಲಿ ಮುಖ್ಯಮಂತ್ರಿಗಳ ಕುರ್ಚಿಯನ್ನು ಮರುಜೋಡಣೆ ಮಾಡಲಾಗಿದೆ. ಈ ವಾಸ್ತು ಬದಲಾವಣೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕಚೇರಿಯಲ್ಲಿ ನೊಣವಿನಕೆರೆ ಅಜ್ಜಯ್ಯನ ಫೋಟೋ:

ದಿಕ್ಕು ಬದಲಾವಣೆಯ ಜೊತೆಗೆ ಡಿ.ಕೆ. ಶಿವಕುಮಾರ್ ಅವರು ತಮ್ಮ ಪರಮ ಆರಾಧ್ಯ ದೈವವಾಗಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಅಜ್ಜಯ್ಯನವರ (ಶ್ರೀ ಕಾಡಸಿದ್ಧೇಶ್ವರ ಸ್ವಾಮಿ) ದೊಡ್ಡದಾದ ಭವ್ಯ ಭಾವಚಿತ್ರವನ್ನು ತಮ್ಮ ಕಚೇರಿಯ ಪ್ರಮುಖ ಗೋಡೆಯ ಮೇಲೆ ಅಳವಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತಮ್ಮ ಪ್ರತಿಯೊಂದು ರಾಜಕೀಯ ಬಿಕ್ಕಟ್ಟಿನ ಹಾಗೂ ಚುನಾವಣೆಯ ಮಹತ್ವದ ಸಮಯದಲ್ಲೂ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಗುರುಗಳ ಆಶೀರ್ವಾದ ಪಡೆಯುತ್ತಿದ್ದರು.

ತಾವು ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಗದ್ದುಗೆಯನ್ನು ಏರುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ಅಜ್ಜಯ್ಯನವರ ದಿವ್ಯ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂಬ ಕಾರಣಕ್ಕೆ ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಕಚೇರಿಯಲ್ಲಿ ಅಜ್ಜಯ್ಯನ ಫೋಟೋವನ್ನು ಪೂಜಿಸಿ ಅಳವಡಿಸಲಾಗಿದೆ. ನಾಳೆ ಸಂಜೆ 4:05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಮುಗಿದ ತಕ್ಷಣವೇ ನೂತನ ಸಿಎಂ ಈ ನವಿಕೃತ ವಾಸ್ತು ಕಚೇರಿಯನ್ನು ಪ್ರವೇಶಿಸಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.

 

Related Articles

Comments (0)

Leave a Comment