ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯ,ಇದೇ ಸರ್ಕಾರದ ಅಭಿಪ್ರಾಯವಾಗುವಂತೆ ಮಾಡುತ್ತೇನೆ;ಸಿಎಂ

ಬೆಂಗಳೂರು: ರಾಜ್ಯದಲ್ಲಿ ತ್ರಿಭಾಷಾ ಸೂತ್ರಕ್ಕೆ ನನ್ನ ಸಹಮತವಿಲ್ಲ,ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ನನ್ನ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯ ಆಗುವ, ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಜನ‌ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದ “ಕುವೆಂಪು ವಿಚಾರ ಕ್ರಾಂತಿ” ಕೃತಿಯನ್ನು ಸಿಎಂ ಸಿದ್ದರಾಮಯ್ಯ ಜನಾರ್ಪಣೆಗೊಳಿಸಿದರು, ನಂತರ ಮಾತನಾಡಿದ ಅವರು, ಕುವೆಂಪು ಅವರ ಪ್ರಖರ ವೈಚಾರಿಕತೆ ಸಮಾಜದಲ್ಲಿ ಜಾತಿ ಅಸಮಾನತೆ ಇರುವವರೆಗೂ ಪ್ರಸ್ತುತವಾಗಿರುತ್ತದೆ. ವೈಚಾರಿಕತೆ, ವೈಜ್ಞಾನಿಕತೆಯ ಬಗ್ಗೆ ಕುವೆಂಪು ಅವರಿಗೆ ಸ್ಪಷ್ಟ ದೃಷ್ಟಿಕೋನ ಇತ್ತು. ಜಾತಿ ತಾರತಮ್ಯ ಇಲ್ಲದ ಸಮಾಜ ಕುವೆಂಪು ಅವರ ಆಶಯವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಾದಷ್ಟೂ ಮೌಡ್ಯ, ಕಂದಾಚಾರ ಹೆಚ್ಚಾಗಿ ವೈಜ್ಞಾನಿಕ ಪ್ರಜ್ಞೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಸಂವಿಧಾನದಲ್ಲಿ ಕುವೆಂಪು, ಬಸವಣ್ಣ ಅವರ ಆಶಯಗಳೂ ಅಡಕವಾಗಿವೆ. ಆದರೆ ಸಂವಿಧಾನದ ಮೌಲ್ಯ ಮತ್ತು ಮಹತ್ವ ಅರಿಯುವ ಕೆಲಸ ಹೆಚ್ಚಾಗಬೇಕು . ಈ ಉದ್ದೇಶದಿಂದಲೇ ಸಂವಿಧಾನ ಓದು, ಸಂವಿಧಾನ ಪೀಠಿಕೆ ಅಭಿಯಾನವನ್ನು ನಾವು ನಡೆಸುತ್ತಿದ್ದೇವೆ ಎಂದರು.

ರಾಜಕಾರಣಿಯಾಗಿ ನನಗೆ ಕೆಲವು ಮಿತಿಗಳು ಇರುತ್ತವೆ. ಸಮಾಜದ ನಂಬಿಕೆಗಳ ಜೊತೆಗೂ ನಾವು ಕೆಲವೊಮ್ಮೆ ನಡೆಯಬೇಕಾಗುತ್ತದೆ. ನಾನು ದೇವಸ್ಥಾನಕ್ಕೆ ಹೋದಾಗ ಕುಂಕುಮ ಇಡುತ್ತಾರೆ. ಕುಂಕುಮ ಇಟ್ಟಿದ್ದಕ್ಕೂ ಕತೆ ಕಟ್ಟುತ್ತಾರೆ. ನಾವು ಗ್ರಾಮೀಣ ಭಾಗಕ್ಕೆ ಹೋದಾಗ ದೇವಸ್ಥಾನಗಳಿಗೆ ಹೋಗದಿದ್ದರೆ ನಮ್ಮ ಬಗ್ಗೆ ಬೇರೆಯದೇ ರೀತಿಯ ಕತೆ ಕಟ್ಟುತ್ತಾರೆ. ಈ ಕತೆಯನ್ನು ಕೆಲವು ಜನರೂ ನಂಬುವುದರಿಂದ ನಮಗೆ ಮತಗಳೇ ಬರುವುದಿಲ್ಲ ಎಂದು ವಿವರಿಸಿದರು.

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದೇ ಹೋದರೆ ಕೇವಲ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಡ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗುವುದಿಲ್ಲ. ನಾವು ಏನೇ ಕಾನೂನು, ನಿಯಮ ಮಾಡಿದರೂ ಸಂವಿಧಾನದ ಚೌಕಟ್ಟಿಗೇ ಒಳಪಟ್ಟರಬೇಕು ಎಂದರು.

ಗುಡಿ, ಚರ್ಚು, ಮಸೀದಿಗಳ ಬಿಟ್ಟು ಬನ್ನಿ. ಬಡತನದ ಬೇರುಗಳ ಬುಡ ಸಮೇತ ಕಿತ್ತು ಹಾಕಲು ಬನ್ನಿ ಎಂದು ಕುವೆಂಪು ಅವರು ಕರೆ ನೀಡಿದ್ದರು. ಈ ಕರೆಯನ್ನು ಸಮಾಜ ಪಾಲಿಸಿದರೆ ಅಸಮಾನತೆಯ ಸಮಾಜ ಸಮಾನತೆಯ ಕಡೆ ಚಲಿಸುತ್ತದೆ. ಕುವೆಂಪು ಅವರ ಆಶಯ ಮತ್ತು ಮೌಲ್ಯಗಳು ಇಡೀ ವಿಶ್ವಕ್ಕೇ ಅನ್ವಯ ಆಗುವುದರಿಂದ ಜಗತ್ತಿನ ಇತರೆ ಭಾಷೆಗಳಿಗೂ ಈ ಕೃತಿ ಜಾರಿಯಾಗಲಿ ಎಂದು ಆಶಿಸಿದರು.

Related Articles

Comments (0)

Leave a Comment