ಅಜ್ಞಾನ ತೊಲಗಿಸಿ ಸುಜ್ಞಾನ ತುಂಬುವವನೇ ನಿಜವಾದ ಗುರು; ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು): ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪರೆಂದು ಭಾವಿಸುತ್ತಾರೆ. ಬದುಕನ್ನು ಅರಳಿಸುವ ಪಸರಿಸುವ ಮತ್ತು ದುಷ್ಟತನ ಆಳಿಸುವ ಶಕ್ತಿ ಗುರುವಿಗಿದೆ. ಅಜ್ಞಾನ ಕಳೆದು ಸುಜ್ಞಾನದ ಅರಿವು ತುಂಬುವವನೇ ನಿಜವಾದ ಗುರುವೆಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಜಗದ್ಗುರು ರಂಭಾಪುರಿ ಪೀಠದಲ್ಲಿ ಗುರು ಪೂರ್ಣಿಮಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಗುರುವೆಂದರೆ ವ್ಯಕ್ತಿಯಲ್ಲ. ಅದೊಂದು ಮಹಾನ್ ಶಕ್ತಿ, ಜ್ಞಾನ ನೀಡಿ ಸನ್ಮಾರ್ಗದಲ್ಲಿ ನಡೆಸುವವನೇ ಗುರು ಎಂಬ ನಂಬಿಕೆಯಿದೆ. ಅಜ್ಞಾನ, ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾಸ್ತ್ರ ಸಾರುತ್ತದೆ. ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂತಲೂ ವ್ಯಾಸರು ಹುಣ್ಣಿಮೆಯಂದೇ ಜನ್ಮ ತಾಳಿರುವ ಕಾರಣ ವ್ಯಾಸ ಪೂರ್ಣಿಮಾ ಎಂತಲೂ ಕರೆಯುತ್ತಾರೆ. ಮುಂದೆ ಗುರಿ ಹಿಂದೆ ಒಬ್ಬ ಗುರುವಿನ ಕಾರುಣ್ಯ ಪ್ರತಿಯೊಬ್ಬರಿಗೂ ಬೇಕು ಎಂದು ಪ್ರತಿಪಾದಿಸಿದರು.

ಪಾಪ ಕಾರ್ಯಕ್ಕೆ ಮನಸ್ಸು ಹೋಗದಂತೆ ಪುಣ್ಯ ಕಾರ್ಯದಲ್ಲಿ ಮನಸ್ಸು ಬೆಳೆಯುವಂತೆ ಉತ್ತಮ ಸ್ಫೂರ್ತಿ ನೀಡಿ ಮುಕ್ತಿ ಮಾರ್ಗ ತೋರುವ ಗುರುವನ್ನು ಪಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಆಷಾಢ ಮಾಸದಲ್ಲಿ ಬರುವ ಗುರು ಪೂರ್ಣಿಮಾ ದಿನದಂದು ಶಿವನು ಯೋಗ ವಿದ್ಯೆಯನ್ನು ಸಪ್ತ ಮಹರ್ಷಿಗಳಿಗೆ ಅರುಹಿ ಮೊದಲ ಗುರುವಾದನು ಎಂಬ ನಂಬಿಕೆಯಿದೆ. ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲಬೇಡಿ ಎಂಬ ವಿವೇಕಾನಂದರ ವಾಣಿಯಂತೆ ಜಾಗೃತರಾಗಿ ಶ್ರೇಷ್ಠ ಗುರುವನ್ನು ಪಡೆದು ಭವ ಬಂಧನದಿಂದ ಮುಕ್ತರಾಗಬೇಕೆಂದರು.

ಗುರು ಪೂರ್ಣಿಮಾ ಅಂಗವಾಗಿ ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು. ಈ ಪವಿತ್ರ ಸಮಾರಂಭದಲ್ಲಿ ಲಿಂಗದಹಳ್ಳಿ, ಮಳಲಿ, ಸಂಗೊಳ್ಳಿ, ಬೆಳಕಿ, ಬೇರುಗಂಡಿ, ನೆಗಳೂರು, ಕಾರ್ಜುವಳ್ಳಿ, ಮಳಖೇಡ, ದೊಡ್ಡಸಗರ, ಹುಡಗಿ, ಗುಂಡಪಲ್ಲಿ ಮಠಗಳ ಶಿವಾಚಾರ್ಯರು ಹಾಗೂ ಹುಬ್ಬಳ್ಳಿ ಆರ್.ಎಂ. ಹಿರೇಮಠ, ಸೋಲಾಪುರದ ರಾಜು, ನಾಂದೇಡದ ವಿನಾಯಕ, ಹೂವಿನಮಡಲು ಹಾಲಸ್ವಾಮಿ, ಶಿವಮೊಗ್ಗದ ಟಿ.ವಿ. ಶಿವಕುಮಾರ್, ಕೊಡಿಯಾಲ ಹೊಸಪೇಟೆ ಗಿರೀಶ್, ಚಿಕ್ಕಮಗಳೂರು ಪ್ರಭುಲಿಂಗಶಾಸ್ತ್ರಿ ಸೇರಿ ಲಿಂಗದಹಳ್ಳಿ ದೊಡ್ಡಸಗರ ಸದ್ಭಕ್ತರು ಪಾಲ್ಗೊಂಡು ಜಗದ್ಗುರುಗಳ ಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ನೆರೆದಿದ್ದ ಎಲ್ಲ ಭಕ್ತರಿಗೂ ಅನ್ನ ದಾಸೋಹವನ್ನು ರಾಣೆಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆ ಜುಂಜಪ್ಪ ಹೆಗ್ಗಪ್ಪನವರ ಮಕ್ಕಳು ನೆರವೇರಿಸಿದರು.

Related Articles

Comments (0)

Leave a Comment