ಅಮೃತಧಾರೆ ಧಾರಾವಾಹಿ ನಟಿ ಶ್ರುತಿಗೆ ಚಾಕು ಇರಿತ; ಆರೋಪಿ ಪತಿ ಅಮರೇಶ್ ಬಂಧನ..!

ಬೆಂಗಳೂರು: ಅಮೃತಧಾರೆ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಶ್ರುತಿ ಮೇಲೆ ಪತಿಯಿಂದಲೇ ಕೊಲೆ ಯತ್ನ ನಡೆದಿದ್ದು, ಆರೋಪಿ ಪತಿ ಅರಮೇಶ್‌ನನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿರುತೆರೆ ನಟಿ ಮಂಜುಳಾ @ ಶ್ರುತಿ ಚಾಕು ಇರಿತಕ್ಕೊಳಗಾಗಿದ್ದು, ಶೀಲಶಂಕಿಸಿ ಅವರ ಪತಿ ಅಮರೇಶ್ ಚಾಕು ಇರಿದಿದ್ದಾರೆ ಎನ್ನಲಾಗಿದೆ. ಹನುಮಂತ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುನೇಶ್ವರ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ಕಳೆದ ಜುಲೈ 4ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಮರೇಶ್ ಎಂಬಾತನ ಪ್ರೀತಿಸಿ ಮದುವೆಯಾಗಿದ್ದ ಮಂಜುಳಾ @ ಶ್ರುತಿಗೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಗೆಗೆ ದಂಪತಿ ನಡುವೆ ಕೌಟುಂಬಿಕ ಕಲಹ ಸೃಷ್ಟಿಯಾಗಿದೆ. ಹನುಮಂತ ನಗರದಲ್ಲಿ ಲೀಸ್‌ಗೆ ಮನೆ ಪಡೆದು ದಂಪತಿ ವಾಸವಿದ್ದರು. ನಂತರ ಶ್ರುತಿ ನಡವಳಿಕೆ ಗಂಡ ಅಮರೇಶ್‌ಗೆ ಇಷ್ಟವಾಗುತ್ತಿರಲಿಲ್ಲ ಎನ್ನಲಾಗಿದೆ. ಇಬ್ಬರ ನಡುವೆ ಹೊಂದಾಣಿಕೆ ಕೂಡ ಸರಿಯಿರಲಿಲ್ಲ‌. ಹೀಗಾಗಿ ಗಂಡನಿಂದ ದೂರಾಗಿ ಅಣ್ಣನ ಮನೆಯಲ್ಲಿ ಶ್ರುತಿ ವಾಸವಿದ್ದರು ಎನ್ನಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಪತಿ ಪತ್ನಿ ಇಬ್ಬರೂ ದೂರವಾಗಿದ್ದು, ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತು‌. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದರು. ಇದಾದ ಬಳಿಕ ಕಳೆದ ರಾಜಿ ಸಂಧಾನದಿಂದ ಒಂದಾಗಿದ್ದರು. ಇಬ್ಬರೂ ಒಂದಾದ ಮಾರನೇ ದಿನವೇ ಹೆಂಡತಿಗೆ ಚಾಕು ಇರಿಯಲಾಗಿದೆ. ಕಳೆದ ಶುಕ್ರವಾರ ಮಕ್ಕಳು ಕಾಲೇಜಿಗೆ ಹೋದ ನಂತರ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದು, ಪೆಪ್ಪರ್ ಸ್ಪ್ರೇ ಹೊಡೆದು ಹೆಂಡತಿಗೆ ಚಾಕು ಇರಿದು ಕೊಲೆಗೆ ಯತ್ನ ನಡೆಸಲಾಗಿದೆ.

ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ. ಸಿನಿಮಾ ಸ್ಟೈಲ್ ನಲ್ಲಿ ತಲೆ ಕೂದಲು ಹಿಡಿದು ಗೋಡೆ ತಲೆಯನ್ನು ಗುದ್ದಿಸಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂದ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹ ಮತ್ತು ಹಣಕಾಸು ವಿಚಾರಕ್ಕೆ ಕೊಲೆ ಯತ್ನ ಮಾಡಿರೋದಾಗಿ ಶ್ರುತಿ ದೂರು ನೀಡಿದ್ದು, ಕೊಲೆಯತ್ನ ಪ್ರಕರಣ ದಾಖಲಿಸಿ ಆರೋಪಿ ಅಮರೇಶ್ ರನ್ನು ಪೊಲೀಸರು ಬಂಧಿಸಿದ್ದಾರೆ‌. ಗಾಯಗೊಂಡಿರುವ ಶ್ರುತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles

Comments (0)

Leave a Comment