ದೇಶೀಯ ಐಟಿ ಕಂಪನಿಗಳೇ ಈಗ ಸಮಯ ಬಂದಿದೆ,ಭಾರತದ ಸ್ವಂತ ಅಗತ್ಯಗಳಿಗೆ ಹೆಚ್ಚು ಒತ್ತು ನೀಡಿ; ಮೋದಿ
- by Suddi Team
- August 10, 2025
- 77 Views

ಬೆಂಗಳೂರು:ಭಾರತೀಯ ತಂತ್ರಜ್ಞಾನ ಕಂಪನಿಗಳು ವಿಶ್ವಾದ್ಯಂತ ಸಾಫ್ಟ್ವೇರ್ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಜಾಗತಿಕವಾಗಿ ತಮ್ಮ ಛಾಪು ಮೂಡಿಸಿವೆ. ಈಗ ಭಾರತದ ಸ್ವಂತ ಅಗತ್ಯಗಳಿಗೆ ಹೆಚ್ಚು ಒತ್ತು ನೀಡುವ ಸಮಯ ಬಂದಿದೆ ಮತ್ತು ಹೊಸ ಉತ್ಪನ್ನಗಳ ಅಭಿವೃದ್ಧಿಯನ್ನು ವೇಗಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಸುಮಾರು 7,160 ಕೋಟಿ ರೂ. ಮೌಲ್ಯದ ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಿದರು ಮತ್ತು 15,610 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು ಬೆಂಗಳೂರಿನ ಕೆ ಎಸ್ ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ನೆಲಕ್ಕೆ ಕಾಲಿಟ್ಟಾಗ ತಮಗೆ ಒಂದು ರೀತಿಯ ಆತ್ಮೀಯತೆಯ ಭಾವನೆ ಮೂಡಿತು ಕರ್ನಾಟಕದ ಸಂಸ್ಕೃತಿಯ ಶ್ರೀಮಂತಿಕೆ, ಜನರ ವಾತ್ಸಲ್ಯ, ಮತ್ತು ಹೃದಯವನ್ನು ತಟ್ಟುವ ಕನ್ನಡ ಭಾಷೆಯ ಮಾಧುರ್ಯವನ್ನು ಶ್ಲಾಘಿಸಿ ಬೆಂಗಳೂರಿನ ಅಧಿದೇವತೆ ಅಣ್ಣಮ್ಮ ತಾಯಿಯ ಪಾದಗಳಿಗೆ ನಮಸ್ಕರಿಸುವುದರ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು.
ಶತಮಾನಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರಕ್ಕೆ ಅಡಿಪಾಯ ಹಾಕಿದ್ದನ್ನು ಸ್ಮರಿಸಿದ ಪ್ರಧಾನ ಮಂತ್ರಿಗಳು, ಕೆಂಪೇಗೌಡರು ಸಂಪ್ರದಾಯದಲ್ಲಿ ಬೇರೂರಿರುವ ಜೊತೆಗೆ ಪ್ರಗತಿಯ ಹೊಸ ಎತ್ತರಗಳನ್ನು ತಲುಪುವ ನಗರದ ಕನಸು ಕಂಡಿದ್ದರು ಎಂದು ಹೇಳಿದರು. “ಬೆಂಗಳೂರು ಯಾವಾಗಲೂ ಆ ಮನೋಭಾವವನ್ನು ಜೀವಂತವಾಗಿರಿಸಿದೆ ಮತ್ತು ಅದನ್ನು ಕಾಪಾಡಿಕೊಂಡಿದೆ. ಇಂದು, ಬೆಂಗಳೂರು ಅದೇ ಕನಸನ್ನು ನನಸಾಗಿಸುತ್ತಿದೆ” ಎಂದರು.
“ಇಂದು ಬೆಂಗಳೂರು ‘ನವ ಭಾರತದ ಉದಯ’ದ ಸಂಕೇತವಾಗಿ ಹೊರಹೊಮ್ಮುತ್ತಿರುವ ನಗರವಾಗಿದೆ”. ಬೆಂಗಳೂರಿನ ಆತ್ಮವು ತಾತ್ವಿಕ ಜ್ಞಾನವನ್ನು ಹೊಂದಿದ್ದರೆ, ಅದರ ಕಾರ್ಯಗಳು ತಾಂತ್ರಿಕ ಪರಿಣತಿಯನ್ನು ಪ್ರತಿಬಿಂಬಿಸುತ್ತವೆ. ಬೆಂಗಳೂರು ಭಾರತವನ್ನು ಜಾಗತಿಕ ಮಾಹಿತಿ ತಂತ್ರಜ್ಞಾನ ನಕ್ಷೆಯಲ್ಲಿ ಹೆಮ್ಮೆಯಿಂದ ಗುರುತಿಸಿದೆ. ಬೆಂಗಳೂರಿನ ಈ ಯಶಸ್ಸಿಗೆ ಇಲ್ಲಿನ ಜನರ ಕಠಿಣ ಪರಿಶ್ರಮ ಮತ್ತು ಪ್ರತಿಭೆಯೇ ಕಾರಣ ಎಂದು ಶ್ಲಾಘಿಸಿದರು.
ಆಪರೇಷನ್ ಸಿಂಧೂರ್ ನ ಯಶಸ್ಸಿಗೆ ತಂತ್ರಜ್ಞಾನದ ಶಕ್ತಿ ಮತ್ತು ರಕ್ಷಣಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ದ ಬಲವೇ ಕಾರಣ. ಈ ಸಾಧನೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಯುವಕರ ಮಹತ್ವದ ಕೊಡುಗೆಯನ್ನು ಅವರು ಗುರುತಿಸಿ, ಈ ಯಶಸ್ಸಿನಲ್ಲಿ ಅವರ ಪಾತ್ರಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಬೆಂಗಳೂರು ಮೆಟ್ರೋದ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಈ ಮಾರ್ಗವು ಬೆಂಗಳೂರಿನ ಹಲವಾರು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ.ಇದರಿಂದ ಬಸವನಗುಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಇದು ಲಕ್ಷಾಂತರ ಜನರ ಜೀವನ ಮತ್ತು ಕೆಲಸವನ್ನು ಸುಗಮಗೊಳಿಸುತ್ತದೆ ಎಂದು ತಿಳಿಸಿದರು.
ಹಳದಿ ಮಾರ್ಗದ ಉದ್ಘಾಟನೆಯ ಜೊತೆಗೆ, ಬೆಂಗಳೂರು ಮೆಟ್ರೋದ ಮೂರನೇ ಹಂತದ ಅಂದರೆ ಕಿತ್ತಳೆ ಮಾರ್ಗಕ್ಕೆ ಸಹ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಘೋಷಿಸಿದರು. ಈ ಮಾರ್ಗವು ಕಾರ್ಯಾಚರಣೆಗೆ ಬಂದ ನಂತರ, ಹಳದಿ ಮಾರ್ಗದೊಂದಿಗೆ ಸೇರಿ ಪ್ರತಿದಿನ 25 ಲಕ್ಷ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುತ್ತದೆ.ಇದು ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಬೆಂಗಳೂರು ಮೆಟ್ರೋ ದೇಶದಲ್ಲಿ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಮಾದರಿಯನ್ನು ಪರಿಚಯಿಸಿದೆ ಎಂದು ಮೋದಿ ಹೇಳಿದರು.
2014 ರಲ್ಲಿ ಮೆಟ್ರೋ ಸೇವೆಗಳು ಕೇವಲ ಐದು ನಗರಗಳಿಗೆ ಸೀಮಿತವಾಗಿದ್ದವು. ಇಂದು, 24 ನಗರಗಳಲ್ಲಿ 1,000 ಕಿಲೋಮೀಟರ್ ಗಳಿಗೂ ಹೆಚ್ಚು ಮೆಟ್ರೋ ಜಾಲವಿದೆ, ಇದು ಜಾಗತಿಕವಾಗಿ ಭಾರತವನ್ನು ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನಾಗಿ ಮಾಡಿದೆ. 2014 ಕ್ಕಿಂತ ಮೊದಲು ಕೇವಲ 20,000 ಕಿಲೋಮೀಟರ್ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಂಡಿದ್ದವು. ಆದರೆ, ಕಳೆದ ಹನ್ನೊಂದು ವರ್ಷಗಳಲ್ಲಿ 40,000 ಕಿಲೋಮೀಟರ್ ಗಳಿಗಿಂತ ಹೆಚ್ಚು ರೈಲು ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ, ಇದು ಸುಸ್ಥಿರ ಸಾರಿಗೆ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಮೋದಿ ತಿಳಿಸಿದರು.
ಭಾರತದ ಸಾಧನೆಗಳು ಕೇವಲ ನೆಲದ ಮೇಲೆ ಮಾತ್ರವಲ್ಲ, ಆಕಾಶದಲ್ಲೂ ಉತ್ತುಂಗಕ್ಕೇರುತ್ತಿವೆ. 2014 ರಲ್ಲಿ ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು, ಆದರೆ ಇಂದು ಈ ಸಂಖ್ಯೆ 160 ಕ್ಕಿಂತ ಹೆಚ್ಚಾಗಿದೆ. ಜಲಮಾರ್ಗ ಮೂಲಸೌಕರ್ಯದಲ್ಲಿನ ಅದ್ಭುತ ಪ್ರಗತಿಯನ್ನೂ ಸಾಧಿಸಲಾಗಿದೆ. 2014 ರಲ್ಲಿ ಕೇವಲ ಮೂರು ರಾಷ್ಟ್ರೀಯ ಜಲಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದವು; ಆದರೆ ಈಗ ಈ ಸಂಖ್ಯೆ ಮೂವತ್ತಕ್ಕೆ ಏರಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭಾರತವು ಸಾಕಷ್ಟು ಮುಂದಿದೆ, 2014 ರವರೆಗೆ ದೇಶದಲ್ಲಿ ಕೇವಲ 7 ಏಮ್ಸ್ (AIIMS) ಮತ್ತು 387 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಇಂದು 22 ಏಮ್ಸ್ ಮತ್ತು 704 ವೈದ್ಯಕೀಯ ಕಾಲೇಜುಗಳು ಜನರಿಗೆ ಸೇವೆ ಸಲ್ಲಿಸುತ್ತಿವೆ. ಕಳೆದ 11 ವರ್ಷಗಳಲ್ಲಿ ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಹೊಸ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗಿದೆ. ಕಳೆದ 11 ವರ್ಷಗಳಲ್ಲಿ, ಐಐಟಿಗಳ (IIT) ಸಂಖ್ಯೆ 16 ರಿಂದ 23 ಕ್ಕೆ, ಐಐಐಟಿಗಳ (IIIT) ಸಂಖ್ಯೆ 9 ರಿಂದ 25 ಕ್ಕೆ ಮತ್ತು ಐಐಎಂಗಳ (IIM) ಸಂಖ್ಯೆ 13 ರಿಂದ 21 ಕ್ಕೆ ಹೆಚ್ಚಾಗಿದೆ. ಇಂದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಗಣನೀಯವಾಗಿ ಹೆಚ್ಚಿನ ಅವಕಾಶಗಳು ಲಭ್ಯವಿದೆ ಎಂದು ಅವರು ತಿಳಿಸಿದರು.
“ಡಿಜಿಟಲ್ ಇಂಡಿಯಾದೊಂದಿಗೆ ‘ವಿಕಸಿತ ಭಾರತ’ದ ಪಯಣ ಮುಂದುವರಿಯುತ್ತದೆ”. ‘ಇಂಡಿಯಾ AI ಮಿಷನ್’ ನಂತಹ ಉಪಕ್ರಮಗಳ ಮೂಲಕ ಭಾರತವು ಜಾಗತಿಕ AI ನಾಯಕತ್ವದತ್ತ ಸಾಗುತ್ತಿದೆ. ‘ಸೆಮಿಕಂಡಕ್ಟರ್ ಮಿಷನ್’ ಕೂಡಾ ವೇಗ ಪಡೆಯುತ್ತಿದ್ದು, ಶೀಘ್ರದಲ್ಲೇ ಭಾರತವು ತನ್ನದೇ ‘ಮೇಡ್-ಇನ್-ಇಂಡಿಯಾ’ ಚಿಪ್ ಅನ್ನು ಹೊಂದಿರುತ್ತದೆ.ಕಡಿಮೆ ವೆಚ್ಚದ, ಹೈಟೆಕ್ ಬಾಹ್ಯಾಕಾಶ ಯೋಜನೆಗಳಿಗೆ ಭಾರತವು ಜಾಗತಿಕ ಮಾದರಿಯಾಗಿದೆ. ಭವಿಷ್ಯದ ತಂತ್ರಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಭಾರತವು ಪ್ರಗತಿ ಸಾಧಿಸುತ್ತಿದೆ ಮತ್ತು ಈ ಪ್ರಗತಿಯ ಅತ್ಯಂತ ಗಮನಾರ್ಹ ಅಂಶವೆಂದರೆ ಬಡವರ ಸಬಲೀಕರಣ ಎಂದು ಅವರು ಒತ್ತಿ ಹೇಳಿದರು.
ಡಿಜಿಟಲೀಕರಣವು ಈಗ ದೇಶದ ಪ್ರತಿ ಹಳ್ಳಿಯನ್ನು ತಲುಪಿದೆ. UPI ಮೂಲಕ, ವಿಶ್ವದ ರಿಯಲ್ ಟೈಮ್ ವಹಿವಾಟುಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಭಾರತದಲ್ಲಿ ನಡೆಯುತ್ತದೆ. ತಂತ್ರಜ್ಞಾನವು ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂದು 2,200 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಮೊಬೈಲ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು. UMANG ಆ್ಯಪ್ ಮೂಲಕ ನಾಗರಿಕರು ಮನೆಯಿಂದಲೇ ಸರ್ಕಾರಿ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಡಿಜಿಲಾಕರ್ ಮೂಲಕ ಸರ್ಕಾರಿ ಪ್ರಮಾಣಪತ್ರಗಳನ್ನು ನಿರ್ವಹಿಸುವ ತೊಂದರೆ ನಿವಾರಣೆಯಾಗಿದೆ. AI-ಚಾಲಿತ ಬೆದರಿಕೆ ಪತ್ತೆಯಂತಹ ತಂತ್ರಜ್ಞಾನಗಳಲ್ಲಿ ಭಾರತವು ಈಗ ಹೂಡಿಕೆ ಮಾಡುತ್ತಿದೆ. ಡಿಜಿಟಲ್ ಕ್ರಾಂತಿಯ ಪ್ರಯೋಜನಗಳು ಸಮಾಜದ ಕಡೆಯ ವ್ಯಕ್ತಿಗೆ ತಲುಪುವುದನ್ನು ಖಚಿತಪಡಿಸುವುದು ನಮ್ಮ ಗುರಿ. ಈ ರಾಷ್ಟ್ರೀಯ ಪ್ರಯತ್ನಕ್ಕೆ ಬೆಂಗಳೂರು ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
“ನಮ್ಮ ಮುಂದಿನ ದೊಡ್ಡ ಆದ್ಯತೆಯೆಂದರೆ ತಂತ್ರಜ್ಞಾನದಲ್ಲಿ ಸ್ವಾವಲಂಬಿಗಳಾಗುವುದು,”.ಭಾರತೀಯ ತಂತ್ರಜ್ಞಾನ ಕಂಪನಿಗಳು ವಿಶ್ವಾದ್ಯಂತ ಸಾಫ್ಟ್ವೇರ್ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಜಾಗತಿಕವಾಗಿ ತಮ್ಮ ಛಾಪು ಮೂಡಿಸಿವೆ. ಈಗ ಭಾರತದ ಸ್ವಂತ ಅಗತ್ಯಗಳಿಗೆ ಹೆಚ್ಚು ಒತ್ತು ನೀಡುವ ಸಮಯ ಬಂದಿದೆ ಮತ್ತು ಹೊಸ ಉತ್ಪನ್ನಗಳ ಅಭಿವೃದ್ಧಿಯನ್ನು ವೇಗಗೊಳಿಸಬೇಕು.ಏಕೆಂದರೆ ಈಗ ಪ್ರತಿ ಕ್ಷೇತ್ರದಲ್ಲೂ ಸಾಫ್ಟ್ ವೇರ್ ಮತ್ತು ಆ್ಯಪ್ ಗಳನ್ನು ಬಳಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಭಾರತವು ಹೊಸ ಎತ್ತರವನ್ನು ತಲುಪುವುದು ಅತ್ಯಗತ್ಯ. ಉದಯೋನ್ಮುಖ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಲು ಉದ್ದೇಶಪೂರ್ವಕ ಪ್ರಯತ್ನಗಳಿಗೆ ಕರೆ ನೀಡಿದ ಪ್ರಧಾನ ಮಂತ್ರಿಗಳು, ‘ಮೇಕ್ ಇನ್ ಇಂಡಿಯಾ’ ಮತ್ತು ಉತ್ಪಾದನಾ ವಲಯದಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಉಪಸ್ಥಿತಿಯನ್ನು ಬಲಪಡಿಸುವ ಅಗತ್ಯವಿದೆ. ಭಾರತದ ಉತ್ಪನ್ನಗಳು ‘ಶೂನ್ಯ ದೋಷ, ಶೂನ್ಯ ಪರಿಣಾಮ’ (Zero Defect, Zero Effect) ಮಾನದಂಡಕ್ಕೆ ಬದ್ಧವಾಗಿರಬೇಕು, ಅಂದರೆ ಅವು ಗುಣಮಟ್ಟದಲ್ಲಿ ದೋಷರಹಿತವಾಗಿರಬೇಕು ಮತ್ತು ಪರಿಸರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಬಾರದು. ಕರ್ನಾಟಕದ ಪ್ರತಿಭೆಯು ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನವನ್ನು ಮುನ್ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಹೀಗೆ ಎಲ್ಲರೂ ಜನರಿಗೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ.ನಾಗರಿಕರ ಜೀವನವನ್ನು ಸುಧಾರಿಸಲು ಸಹಯೋಗದ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೊಸ ಸುಧಾರಣೆಗಳನ್ನು ಜಾರಿಗೆ ತರುವುದು ಒಂದು ಪ್ರಮುಖ ಜವಾಬ್ದಾರಿಯಾಗಿದೆ. ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ನಿರಂತರವಾಗಿ ಸುಧಾರಣೆಗಳನ್ನು ಜಾರಿಗೊಳಿಸಿದೆ.ಇದಕ್ಕೆ ಉದಾಹರಣೆಯಾಗಿ, ಕಾನೂನುಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲು ‘ಜನ್ ವಿಶ್ವಾಸ್ ಮಸೂದೆ’ಯನ್ನು ಜಾರಿಗೊಳಿಸಲಾಗಿದೆ. ಈಗ ‘ಜನ್ ವಿಶ್ವಾಸ್ 2.0’ ಅನ್ನು ಸಹ ಪರಿಚಯಿಸಲಾಗುತ್ತಿದೆ ಎಂದು ಘೋಷಿಸಿದರು.
Related Articles
Thank you for your comment. It is awaiting moderation.
Comments (0)