- Uncategorized
- ಬೆಂಗಳೂರು
- ಮುಖ್ಯ ಮಾಹಿತಿ
- ರಾಜ್ಯ
- Like this post: 0
ಪರೀಕ್ಷಾರ್ಥಿಗಳೇ… ಧೈರ್ಯವಾಗಿ ಪರೀಕ್ಷೆಗೆ ಬನ್ನಿ. ಆಲ್ ದ ಬೆಸ್ಟ್…
- by Suddi Team
- July 14, 2021
- 23 Views

ಬೆಂಗಳೂರು: ಆಲ್ ದ ಬೆಸ್ಟ್.. ಆಲ್ ದ ಬೆಸ್ಟ್… ಬನ್ನಿ ಮಕ್ಕಳೇ.. ನಿಮಗಾಗಿ ಎಲ್ಲ ಸಿದ್ಧತೆಯಾಗಿದೆ. ಧೈರ್ಯವಾಗಿ ಪರೀಕ್ಷೆ ಬರೆಯಿರಿ…..ಆಲ್ ದ ಬೆಸ್ಟ್…
ಇದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಚಲನಚಿತ್ರ ನಟನಟಿಯರ ಹಾರೈಕೆ.
ಇದೇ ಜುಲೈ 19 ಮತ್ತು 22ರಂದು ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಪರೀಕ್ಷಾರ್ಥಿಗಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಲು ನಾಡಿನ ಹೆಸರಾಂತ ಚಲನಚಿತ್ರ ನಟನಟಿಯರು ಶುಭ ಹಾರೈಸಿ ಪರೀಕ್ಷಾ ಸಿದ್ಧತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿರುವ ವ್ಯಾಪಕ ಸಿದ್ಧತೆಗಳನ್ನು ವಿವರಿಸಿ ಧೈರ್ಯವಾಗಿ ಪರೀಕ್ಷೆ ಎದುರಿಸಲು ಪರೀಕ್ಷಾ ಕೇಂದ್ರಕ್ಕೆ ಬರುವಂತೆ ಕರೆ ನೀಡಿದ್ದಾರೆ.
ಪರೀಕ್ಷಾ ಸಿದ್ಧತೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಕಿರು ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಿರಿಯ ನಟಿ ಅನುಪ್ರಭಾಕರ್, ನಟ ಕಿರಣ್ ಶ್ರೀನಿವಾಸ್, ನಟ ದೇವ್ ದೇವಯ್ಯ, ನಟಿ ಹಿತಾ ಚಂದ್ರಶೇಖರ್, ನಟಿ ಸಂಯುಕ್ತಾ ಹೊರನಾಡು ಮತ್ತಿತರ ನಟರು ಪರೀಕ್ಷಾ ಕೇಂದ್ರದ ಮುಂದೆ ನಿಂತು ಮಕ್ಕಳನ್ನು ಸ್ವಾಗತಿಸುತ್ತಾ ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ವ್ಯಾಪಕ ಸಿದ್ಧತೆಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.
ವಿದ್ಯಾರ್ಥಿಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಹಂತ. ಇದು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಮುಖ ಘಟ್ಟವಾದ್ದರಿಂದ ಈ ಪರೀಕ್ಷೆಯನ್ನು ಎದುರಿಸುವುದು ನಿಜಕ್ಕೂ ಒಂದು ಉತ್ತಮ ಸಂದರ್ಭವಾಗಿದೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ.
ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸೀಟಿಂಗ್ ವ್ಯವಸ್ಥೆ, ಮೊಬೈಲ್ ಫೋನ್ ಮತ್ತು ಇತರೆ ವಸ್ತುಗಳನ್ನು ಇಡುವ ವ್ಯವಸ್ಥೆ, ಜ್ವರ ಮತ್ತಿತರ ಲಕ್ಷಣವಿರುವವರಿಗೆ ಮಾಡಿರುವ ಪ್ರತ್ಯೇಕ ಕೊಠಡಿ, ಅರೋಗ್ಯ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರ ಸೇವೆ, ಕುಡಿಯುವ ನೀರು ವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯುತ್ತಿರುವುದನ್ನು ಚಿತ್ರೀಕರಿಸಿದ ದೃಶ್ಯಗಳ ಹಿನ್ನೆಲೆಯಲ್ಲಿ ನಟರು ಒಂದೊಂದೇ ಸಿದ್ಧತೆಯನ್ನು ವಿವರಿಸಿರುವುದು ಕಿರುಚಿತ್ರದಲ್ಲಿ ಗಮನಸೆಳೆಯುತ್ತಿದೆ.
ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಯನ್ನು ಹೇಗೆ ಬರೆಯುವುದು ಮತ್ತು ಒಎಂಆರ್ ಶೀಟ್ ನ್ನು ಹೇಗೆ ತುಂಬುವುದು ಎಂದು ವಿವರಿಸುತ್ತಾ ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಬಂದು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.
ಯಾರ ಮಾತಿಗೂ ಕಿವಿಗೊಡದೇ ಯಾವುದಕ್ಕೂ ಹಿಂಜರಿಯದೇ ಉತ್ತಮ ವಾತಾವರಣದಲ್ಲಿ ಪರೀಕ್ಷೆ ಬರೆಯಿರಿ ಎಂದು ಸಲಹೆ ನೀಡಿದ್ದಾರೆ.
Related Articles
Thank you for your comment. It is awaiting moderation.
Comments (0)